Tuesday 7 November 2017

[11/4, 6:18 PM] ಶಿವಶಂಕರ್ ಎಸ್ ಎಸ್: 🌱 *ಕವ‌ನ* 🔗 *(ಅ)ಗಣಿತ*❗

ಒಂದು  ಎರಡು
ಬಾಳೆಲೆ ಹರಡು
ಮೂರು ನಾಲ್ಕು
ಅನ್ನ ಹಾಕು
ಐದು ಆರು
ಬೆಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಎಲೆ ಮುದಿರೆತ್ತು
ಒಂದರಿಂದ ಹತ್ತು
ಹೀಗಿತ್ತು
ಊಟದ ಆಟವು
ಮುಗಿದಿತ್ತು

-ಜಿ.ಪಿ.ರಾಜರತ್ನಂ



 *_ಗಣಿತ ಪದ_* -
ಒಂದು  ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಒಂಬತ್ತು ಹತ್ತು 😊😊😊
[11/6, 12:00 AM] ಶಿವಶಂಕರ್ ಎಸ್ ಎಸ್: 🌱 *ಕವ‌ನ* 🔗 *(ಅ)ಗಣಿತ*❗

ಹತ್ತು ಹತ್ತು ಇಪ್ಪತ್ತು,
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು,
 ಕೈಯಲಿ ಒಂದು ಕಲ್ಲಿತ್ತು ।।
ಮೂವತ್ತು ಹತ್ತು ನಲವತ್ತು,
ಎದುರಲಿ ಮಾವಿನ ಮರವಿತ್ತು
ನಲವತ್ತು ಹತ್ತು ಐವತ್ತು,
ಮರದಲಿ ಕಾಯಿ ತುಂಬಿತ್ತು ।।
ಐವತ್ತು ಹತ್ತು ಅರವತ್ತು,
ಕಲ್ಲನು ಬೀರಿದ ಸಂಪತ್ತು|
ಅರವತ್ತು ಹತ್ತು ಎಪ್ಪತ್ತು,
ಕಾಯಿಗಳೆಲ್ಲ ಉದುರಿತ್ತು ।।
ಎಪ್ಪತ್ತು ಹತ್ತು ಎಂಬತ್ತು,
ಮಾಲಿಯ ಕಂಡನು ಸಂಪತ್ತು|
ಎಂಬತ್ತು ಹತ್ತು ತೊಂಬತ್ತು,
ಕಾಲುಗಳೆರಡು ಓಡಿತ್ತು ।।
ತೊಂಬತ್ತು ಹತ್ತು ನೂರಾಯ್ತು,
ತಲುಪಿದ ಮನೆಗೆ ಸಂಪತ್ತು ।।

-ಜಿ.ಪಿ.ರಾಜರತ್ನಂ



 *_ಗಣಿತ ಪದ_* -
ಹತ್ತು ಇಪ್ಪತ್ತು ಮೂವತ್ತು ನಲವತ್ತು ಐವತ್ತು ಅರವತ್ತು ಎಪ್ಪತ್ತು  ಎಂಬತ್ತು ತೊಂಬತ್ತು  ನೂರು
[11/6, 9:42 PM] ಶಿವಶಂಕರ್ ಎಸ್ ಎಸ್: 🌱 *ಕವ‌ನ* 🔗 *(ಅ)ಗಣಿತ*❗

’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

-ಅಂಬಿಕಾತನಯದತ್ತ ( ನಾಕು ತಂತಿ)

 *_ಗಣಿತ ಪದ_* -

ನಾಕು (ನಾಲ್ಕು)
ಗಣ (set)
ಕೂಡಿ

Wednesday 1 November 2017

🌱 *ಕವ‌ನ* 🔗 *(ಅ)ಗಣಿತ*❗

 ಆತ್ಮೀಯರೇ, ಬಹಳ ದಿನಗಳಿಂದ 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃....ಕಳಿಸ್ತಾ ಇದ್ದೆ....ನಿಮಗೆ ಇಷ್ಟ ಆಗದೇ ಕಷ್ಟವಾದರೂ...ನೀವು ಓದದೇ ಇದ್ದರೂ ಮೆಸೇಜ್ ಮಾತ್ರ ನಿಮ್ಮ  ಮೊಬೈಲ್‌ ಲ್ಲಿ ಬಂದು ಕುಳಿತಿರುತ್ತಿತ್ತು..😊😊

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಜೊತೆಗೆ ಇಂದಿನಿಂದ   🌱 *ಕವ‌ನ* 🔗 *(ಅ)ಗಣಿತ*❗ ಪ್ರಾರಂಭ...ನಮ್ಮ ಕನ್ನಡ ಕವಿಗಳ  ಕವನ ಗಳಲ್ಲಿ ಗಣಿತ ( ಗಣಿತ ಪದಗಳು) ವನ್ನು ಉಪಯೋಗಿಸಿರುವ ಕವನಗಳನ್ನು ಕಳಿಸುವ ಒಂದು ಪ್ರಯತ್ನ..‌🌱 *ಕವ‌ನ* 🔗 *(ಅ)ಗಣಿತ*❗ ಎಂದರೆ, ಕವನ ದಲ್ಲಿ ಗಣಿತ ಅಂತ...ಹಾಗೆಯೇ ಕವನ ಅಗಣಿತ ಎಂದರೆ, ಆ ಕವನದ ಅರ್ಥ ಅಗಣಿತ, ಅಂದರೆ ಕವನವನ್ನು ಅರ್ಥ ಮಾಡಿಕೊಳ್ಳುವುದು ಅವರವರ ಭಾವಕ್ಕೆ ಎನ್ನುವುದು .. ನೋಡೋಣ ಎಷ್ಟು ದಿನ ಮುಂದುವರೆಯುತ್ತೋ....😊😊😊
 🌱*ಕವ‌ನ* 🔗 *(ಅ)ಗಣಿತ*❗

ಬಡವನೊಬ್ಬನು ಇರುತ ಸುಖದಲಿ
ಮಡದಿ ಮಕ್ಕಳ ಕೂಡೆ ನಲಿಯುತ
ನುಡಿದ ಭಾಷೆಗೆ ಎರಡು ಬಗೆಯದೆ
ಪಡೆದನಚ್ಯುತ ಪದವಿಯ.
ಕಡಿದು ಕಷ್ಟದಿ ತರುಗಳೆಲ್ಲವ
ಒಡೆದು ಬುಡಗಳ ಚದುರ ಕೈಯಲಿ
ಬಡವನಾದರು ಪಡುತ ಸುಖವನು
ಪಡೆದನಚ್ಯುತ ಪದವಿಯ.

-ಕುವೆಂಪು


 *_ಗಣಿತ ಪದ_* -
ಒಬ್ಬನು
ಎರಡು

Friday 25 August 2017

ಗಣೇಶ ಮಹಿಮೆ

ಗಣೇಶ ಮಹಿಮೆ


ಮೋದಕ ಪ್ರಿಯನ ಮೋಹಕ ಸ್ವರೂಪ
(ಈ ಲೇಖನ ಕನ್ನಡ ಪ್ರಭ ಪತ್ರಿಕೆ ಯಲ್ಲಿ ೨೦೧೪ ರಲ್ಲಿ ಪ್ರಕಟವಾಗಿದೆ ಮೂಲ ಲೇಖಕರು ಹರ್ಷ ಕಣೇಕಲ್ , ಬೆಂಗಳೂರು..)




ಓಂ ಶ್ರೀಗುರುಭ್ಯೋ ನಮಃ,

ಓಂ ಶ್ರೀಗಣೇಶಾಯ ನಮಃ,

ಓಂ ಶ್ರೀವಾಗ್ದೇವ್ಯೈ ನಮಃ

'ದಂತಾವಲಾಸ್ಯೋ ದಶಬಾಹುಯುಕ್ತೋ

ದಯಾಧುರೀಣೋ ಧೃತರತ್ನಕುಂಭಃ ೤

ದರಸ್ಮಿತೋ ದಾನರಸೇನಯುಕ್ತೋ

ದೇಯಾತ್ಸದಾ ಶಾಶ್ವತ

ದಿವ್ಯ ಸೌಖ್ಯಮ್ ॥

(ಟಿ.ಬಿ. ಲಕ್ಷ್ಮಣರಾವ್)

ಆನೆಯ ಮುಖವುಳ್ಳವನೂ, ಹತ್ತು ಬಾಹುಗಳುಳ್ಳವನೂ, ದಯಾವಂತರಲ್ಲಿ ಅಗ್ರಗಣ್ಯನೂ, (ತನ್ನ ಸೊಂಡಿಲಿನಲ್ಲಿ) ರತ್ನಕಲಶವನ್ನು ಧರಿಸಿರುವವನೂ, ಮಂದಹಾಸವನ್ನು ಬೀರುತ್ತಿರುವವನೂ, ಮದೋದಕದಿಂದ ಕೂಡಿರುವ (ಗಂಡಸ್ಥಳವುಳ್ಳವನೂ ಆದ ಶ್ರೀ ಮಹಾಗಣಪತಿಯು ನಮಗೆ) ಶಾಶ್ವತವೂ ದಿವ್ಯವೂ ಆದ ಸುಖವನ್ನು ನೀಡಲಿ.

ಶ್ರೀ ಮಹಾಗಣಪತಿ, ಲಂಬೋದರ, ಗಜಾನನ, ಹೇರಂಬ, ಗಣೇಶ, ವಿನಾಯಕ, ವಕ್ರತುಂಡ ಮುಂತಾದ ಅನಂತ ನಾಮಗಳಿಂದ ವಿಖ್ಯಾತನಾದ ಈ ದೇವನ ಮಹಿಮೆಯನ್ನು ಅರಿಯದವರು ಯಾರು? ಆರ್ಷೇಯವಾದ ಸನಾತನ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಪೂಜಿಸಲ್ಪಡುತ್ತಿರುವ ನೂರಾರು ದೇವತೆಗಳಲ್ಲಿ ನಿಸ್ಸಂಶಯವಾಗಿ ಅತ್ಯಂತ ಲೋಕಪ್ರಿಯನೆಂದರೆ, ಈತನೇ! ಪ್ರಥಮ ಪೂಜಿತನೂ, ವಿಘ್ನಕರ್ತನೂ, ವಿಘ್ನಹರ್ತನೂ ಆದ ಈ ಮಂಗಲಮೂರ್ತಿಯ ಆವಿರ್ಭಾವ, ಸ್ವರೂಪ, ಮಂತ್ರರಹಸ್ಯ ಇತ್ಯಾದಿಗಳ ಬಗ್ಗೆ ಅನೇಕ ಪುರಾಣ ಉಪಪುರಾಣಗಳಲ್ಲೂ, ತಂತ್ರ ಆಗಮಗಳಲ್ಲೂ ಉಪಲಬ್ಧವಿದ್ದು ಜನಜನಿತವಾಗಿದೆ.

ಮೇರುಪರ್ವತವನ್ನೇ ಲೇಖನಿಯನ್ನಾಗಿ ಮಾಡಿಕೊಂಡು ಸಮುದ್ರವನ್ನೇ ಮಸಿಕುಡಿಕೆಯನ್ನಾಗಿಸಿ, ಭೂಮಂಡಲವನ್ನೇ ಪುಸ್ತಕವನ್ನಾಗಿಸಿ ಅದರಲ್ಲಿ ಶ್ರೀಗಣೇಶನ ಮಹಿಮೆಗಳನ್ನು ಬರೆದರೂ ಇನ್ನೂ ಅನಂತವಾಗಿ ಉಳಿಯುವುದು ಎನ್ನುತ್ತದೆ ಒಂದು ಸಂಸ್ಕೃತ ಸುಭಾಷಿತ. ಆದ್ದರಿಂದ ಶ್ರೀಗಣೇಶ ಪರವಾದ ಅಪಾರ ವಾಜ್ಞ್ಮಯ ಪ್ರಪಂಚದಿಂದ ಕೇವಲ ಆತನ ಪ್ರಮುಖ ದ್ವಾದಶನಾಮಗಳ ಭಾವಾರ್ಥ, ಆತನ ಆಯುಧ ಹಾಗೂ ವಾಹನದ ಸಾಂಕೇತಿಕಾರ್ಥ ಮುಂತಾದವುಗಳಿಗೆ ಈ ಲೇಖನವನ್ನು ಸೀಮಿತಗೊಳಿಸಲಾಗಿದೆ.

ಮುದ್ಗಲ ಪುರಾಣದಲ್ಲಿ ಪ್ರಸಿದ್ಧವಾದ ಶ್ರೀಗಣೇಶನ ದ್ವಾದಶನಾಮ ಸ್ತೋತ್ರದಲ್ಲಿ ಈ ಕೆಳಗಿನ ಹನ್ನೆರಡು ಹೆಸರುಗಳು ಬರುತ್ತವೆ.

ಪ್ರಥಮಂ ವಕ್ರತುಂಡಂ ಚ

ಏಕದಂತಂ ದ್ವಿತೀಯಕಂ ೤

ತೃತೀಯಂ ಕೃಷ್ಣಪಿಂಗಾಕ್ಷಂ

ಗಜವಕ್ತ್ರಂ ಚತುರ್ಥಕಮ್ ॥

ಲಂಬೋದರಂ ಪಂಚಮಂ ಚ

ಷಷ್ಠಂ ವಿಕಟಮೇವ

ಸಪ್ತಮಂ ವಿಘ್ನರಾಜೇಂದ್ರಂ

ಧೂಮ್ರವರ್ಣಂ ತಥಾಷ್ಟಮಂ ॥

ನವಮಂ ಭಾಲಚಂದ್ರಂ

ದಶಮಂ ತು ವಿನಾಯಕಮ್

ಏಕಾದಶಂ ಗಣಪತಿಂ

ದ್ವಾದಶಂ ತು ಗಜಾನನಮ್ ॥

ಈ ಹನ್ನೆರಡು ನಾಮಗಳ ಸಾಮಾನ್ಯ ಹಾಗೂ ವಿಶೇಷಾರ್ಥಗಳನ್ನು ಈಗ ಪರಿಚಯಿಸಿಕೊಳ್ಳೋಣ.

ವಕ್ರತುಂಡ

ಸಾಮಾನ್ಯವಾಗಿ ವಕ್ರತುಂಡ ಎಂದರೆ ಸೊಟ್ಟು ಮೋರೆಯವನು, ಸೊಟ್ಟಾಗಿರುವ ಸೊಂಡಿಲು ಇರುವವನು ಎಂದು ಪರಿಗಣಿಸುತ್ತಾರೆ. ಆದರೆ ಈ ನಾಮದ ಪಾರಮಾರ್ಥಿಕ ಅರ್ಥ ಹೀಗಿದೆ: 'ವಕ್ರಾನ್ ತುಂಡಯತಿ ಇತಿ ವಕ್ರತುಂಡಃ' ಎಂದರೆ ವಕ್ರ ನಡತೆಯುಳ್ಳವರಿಗೆ ಶಿಕ್ಷೆಕೊಟ್ಟು ಅವರನ್ನು ಯಾವಾತನು ಸರಿಯಾದ ಮಾರ್ಗಕ್ಕೆ ತರುತ್ತಾನೆಯೋ ಅವನೇ ವಕ್ರತುಂಡನೆಂದು ಪರಿಗಣಿಸಲ್ಪಟ್ಟಿದ್ದಾನೆ. ಮುದ್ಗಲ ಪುರಾಣದಲ್ಲಿ 'ವಕ್ರತುಂಡ' ನಾಮಾಂಕಿತನಾದ ಶ್ರೀಗಣೇಶನು ಮಾತ್ಸರ್ಯಾಸುರನನ್ನು ಸೋಲಿಸಿದ ಕತೆ ವಿಶದವಾಗಿದೆ.

ಹಿಂದೆ ಇಂದ್ರಿಯಗಳ ಒಡೆಯನಾದ ಇಂದ್ರನ ನಿರ್ಲಕ್ಷ್ಯದಿಂದ ಮಾತ್ಸರ್ಯಾಸುರನ ಜನನವಾಯಿತು. ತನ್ನತನವನ್ನು ಮರೆತರೆ ತಾನು ಅಪರಿಪೂರ್ಣನೆಂಬ ಭಾವವು ಮನಸ್ಸಿನಲ್ಲಿ ಮೂಡಿ ಅದರಿಂದ ಬೇರೆಯವರ ವಿಷಯದಲ್ಲಿ ಮಾತ್ಸರ್ಯವು ಉದಯಿಸುವುದು. ಇದೇ ಮಾತ್ಸರ್ಯಾಸುರನ ಹುಟ್ಟಿಗೆ ಕಾರಣ. ಆ ರಾಕ್ಷಸನು ಉಗ್ರವಾದ ತಪಸ್ಸನ್ನು ಮಾಡಿ ಪರಶಿವನನ್ನು ಒಲಿಸಿಕೊಂಡು ನಿರ್ಭಯನಾದನು. ಮೂರು ಲೋಕಗಳಲ್ಲೂ ಮಾತ್ಸರ್ಯವು ತಾಂಡವಆಡಿತು. ಅಶಾಂತಿಯು, ಉದ್ವಿಗ್ನತೆಗಳೂ ಮನೆ ಮಾಡಿದವು. ಈ ವೈಪರೀತ್ಯವನ್ನು ತಡೆಯಲು ದೇವತೆಗಳೆಲ್ಲರೂ ಭಗವಾನ್ ದತ್ತಾತ್ರೇಯರ ಮೊರೆ ಹೊಕ್ಕರು.

ಶ್ರೀದತ್ತಾತ್ರೇಯರು ಅವರಿಗೆಲ್ಲಾ ಶ್ರೀಮಹಾಗಣಪತಿಯನ್ನು 'ವಕ್ರತುಂಡ' ಎಂಬ ರೂಪದಲ್ಲಿ 'ಗಂ' ಮಹಾಮಂತ್ರದಿಂದ ಅರ್ಚಿಸಲು ಹೇಳಿದರು. ಅದರಂತೆ ದೇವತೆಗಳು ಮಾಡಲಾಗಿ ವಕ್ರತುಂಡನಾದ ಶ್ರೀಗಣೇಶನು ಪ್ರತ್ಯಕ್ಷನಾಗಿ ಅವರಿಗೆ ಅಭಯ ನೀಡಿದನು. ನಂತರ ಮಾತ್ಸರ್ಯಾಸುರನ ಮುಂದೆ ಯುದ್ಧ ಸನ್ನದ್ಧನಾಗಿ ಬರಲು, ಈತನ ದರ್ಶನ ಮಾತ್ರದಿಂದ ಭಯಭೀತನಾದ ಆ ಅಸುರನು ಶರಣಾಗತನಾದನು. 'ಓಂ ವಕ್ರತುಂಡಾಯ ಹುಮ್‌' ಎಂಬುದು ಶ್ರೀಗಣೇಶನ ಷಡಕ್ಷರೀ ಮಂತ್ರವೆಂದು ಪ್ರಖ್ಯಾತವಾಗಿದೆ.

ಏಕದಂತ

ಒಂದು ದಂತವು ಅಖಂಡವಾಗಿರುವುದರಿಂದ ಗಣಪತಿಗೆ ಈ ಹೆಸರು ಬಂದಿದೆ. ಗಣಪತಿಯ ಎಡಭಾಗದ ದಂತವು ಶ್ರೀ ಪರಶುರಾಮರ ಕೊಡಲಿಯ ಪ್ರಹಾರದಿಂದ ಮುರಿಯಿತೆಂದೂ, ಶ್ರೀಮನ್‌ಮಹಾಭಾರತವನ್ನು ಬರೆಯುವಾಗ ಲೇಖನಿಯಾಗಿ ಉಪಯೋಗಿಸುವುದಕ್ಕಾಗಿ ಗಣಪತಿಯೇ ಮುರಿದನೆಂದೂ ಬೇರೆ ಬೇರೆ ಕತೆಗಳಿವೆ. ಪಾರಮಾರ್ಥಿಕವಾಗಿ 'ಒಂದು (ಏಕ)' ಎನ್ನುವುದು 'ಬ್ರಹ್ಮ'ದ ನಿರ್ದೇಶಕವಾಗಿದೆ. ಇದರ ಅರ್ಥ ಏಕವಾಗಿರುವ 'ಬ್ರಹ್ಮದ' ಅನುಭೂತಿ ಬರುವ ದಿಶೆ ತೋರುವವನು ಎಂದಾಗುತ್ತದೆ.

ಶ್ರೀಗಣೇಶನು 'ಏಕದಂತ' ಎಂಬ ಅವತಾರವನ್ನೆತ್ತಿ ಮದಾಸುರನನ್ನು ಮಣಿಸಿದ ಕತೆ ಮುದ್ಗಲ ಪುರಾಣದಲ್ಲಿ ವರ್ಣಿತವಾಗಿದೆ. ಚ್ಯವನ ಮಹರ್ಷಿಯ ಮಗನಾದ ಮದಾಸುರನು ಅಸುರ ಗುರುವಾದ ಶುಕ್ರಾಚಾರ್ಯರಿಂದ ಮಹಾನ್‌ಶಕ್ತಿಬೀಜ ಮಂತ್ರವಾದ 'ಹ್ರೀಂ' ಕಾರದ ಉಪದೇಶವನ್ನು ಪಡೆದು, ಸಾವಿರಾರು ವರ್ಷಗಳ ಕಾಲ ಘೋರವಾದ ತಪಸ್ಸನ್ನಾಚರಿಸಿದನು. ಅನೇಕ ವರಗಳನ್ನು ಸಂಪಾದಿಸಿ ಲೋಕ ಕಂಟಕನಾದನು. ಇವನ ಉಪಟಳ ಸಹಿಸಲಾರದೆ ದೇವತೆಗಳು ಭಗವಾನ್ ಸನತ್ಕುಮಾರರನ್ನು ಆಶ್ರಯಿಸಿದರು. ಅವರು 'ಏಕದಂತ' ರೂಪದಲ್ಲಿ ಗಣೇಶನನ್ನು ಪೂಜಿಸಲು ದೇವತೆಗಳಿಗೆ ತಿಳಿಸಿದರು. ಅದರಂತೆ ಮಾಡಲಾಗಿ ಮದಾಸುರನ ಮುಂದೆ ಶ್ರೀಗಣೇಶನು 'ಏಕದಂತ' ರೂಪದಲ್ಲಿ ಪ್ರತ್ಯಕ್ಷನಾದನು. ಈತನನ್ನು ನೋಡಿ ಭಯಭೀತನಾದ ಮದಾಸುರನು ಸಂಪೂರ್ಣವಾಗಿ ಶರಣಾಗತನಾದನು. ಅವನನ್ನು ಕರುಣೆಯಿಂದ ಅನುಗ್ರಹಿಸಿದ ಏಕದಂತನು, ಎಲ್ಲಿ ತನ್ನ ಪೂಜೆಯು ಸಾತ್ವಿಕವಾಗಿ ನಡೆಯುವುದೋ ಅಲ್ಲಿ ಮದಾಸುರನು ಇರಬಾರದು ಮತ್ತು ಸ್ವಾರ್ಥ, ಅಸೂಯಾಪರ, ಅಹಂಕಾರ, ಮದಗರ್ವಿತರ ಕಾರ್ಯಗಳಲ್ಲಿ ಅವನು ನಿರ್ಭಯದಿಂದ ವಿಹರಿಸಬಹುದು ಎಂದು ಆದೇಶಿಸಿದನು.

ಕೃಷ್ಣಪಿಂಗಾಕ್ಷ

ಕೃಷ್ಣ ಪಿಂಗ ಅಕ್ಷ ಈ ರೀತಿ ಈ ಪದವು ರೂಪಗೊಂಡಿದೆ. ಕೃಷ್ಣ ಎಂದರೆ ಕಪ್ಪು, ಪಿಂಗ ಎಂದರೆ ಮಸುಕಾದುದು ಮತ್ತು ಅಕ್ಷ ಎಂದರೆ ಕಣ್ಣು. ಕಪ್ಪು ಎನ್ನುವ ಪದವು ಭೂಮಿಗೆ ಅನ್ವಯಿಸುತ್ತದೆ ಮತ್ತು ಮಸುಕಾದುದು ಎನ್ನುವುದು ಮೇಘಕ್ಕೆ ಅನ್ವಯಿಸುತ್ತದೆ. ಪೃಥ್ವಿ ಮತ್ತು ಮೇಘಗಳು ಯಾರ ಕಣ್ಣಾಗಿರುವುವೋ, ಯಾರು ಭೂಮಿ ಮತ್ತು ಮೇಘ ಮಂಡಲದಲ್ಲಿ ಎಲ್ಲವನ್ನೂ ನೋಡಬಲ್ಲನೋ ಅವನೇ ಕೃಷ್ಣಪಿಂಗಾಕ್ಷ.

ಗಜವಕ್ತ್ರ

ಗಜವಕ್ತ್ರ ಎನ್ನುವುದಕ್ಕೆ ಸಾಮಾನ್ಯಾರ್ಥ ಆನೆಯ ಮುಖವುಳ್ಳವನು ಎಂದು. 'ಗಜ' ಪದದ ವಿಶೇಷಾರ್ಥ ಮೇಘ. ಇದನ್ನು ದ್ಯು (ದೇವ)ಲೋಕದ ಪ್ರತಿನಿಧಿ ಎಂದು ಪರಿಗಣಿಸುತ್ತಾರೆ. ವಕ್ತ್ರ ಎಂದರೆ ಮುಖ. ಗಜವಕ್ತ್ರ ಎಂದರೇ ದ್ಯುಲೋಕವು ಯಾರ ಮುಖವು ಆಗಿರುವುದೋ ಅವನು ಎಂಬ ಅರ್ಥ ಬರುತ್ತದೆ. ಶ್ರೀಗಣೇಶನೇ ಮಹಾವಿರಾಟ್ ಎಂದು ನಾಮವು ನಿರೂಪಿಸುತ್ತದೆ.

ಲಂಬೋದರ

ಲಂಬ (ದೊಡ್ಡದು, ಬೃಹತ್) ಉದರ (ಹೊಟ್ಟೆ, ಗುಹೆ) ಪದಗಳ ಸಂಧಿಯೇ ಲಂಬೋದರ, ಬ್ರಹ್ಮಾಂಡವೇ ಯಾರ ಉದರದಲ್ಲಿ ಅಡಗಿದೆಯೋ ಅಂತಹ ವಿರಾಟ್ ಪುರುಷನೇ ಲಂಬೋದರ. ಕ್ರೋಧಾಸುರನೆಂಬ ಅಸುರನ ನಾಶಕ್ಕಾಗಿ 'ಲಂಬೋದರ' ಎಂಬ ಈ ಅವತಾರವನ್ನು ಶ್ರೀಗಣೇಶನು ಎತ್ತಿದನು ಎಂದು ಮುದ್ಗಲ ಪುರಾಣವು ಹೇಳುತ್ತದೆ.

ವಿಕಟ

ವಿ ಕ ತಅಕತ. ವಿ ಎಂದರೆ ವಿಶೇಷವಾಗಿ, ಕೃತ ಎಂದರೆ ಮಾಡಲ್ಪಟ್ಟಿದ್ದು ಮತ್ತು ಅಕತ ಎಂದರೆ ಮೋಕ್ಷ. ಆದ್ದರಿಂದಲೇ ವಿಕಟ ಎಂದರೆ ಯಾರು ವಿಶೇಷವಾದ ರೀತಿಯಲ್ಲಿ ಮೋಕ್ಷವನ್ನು ಪ್ರಸಾಧಿಸುತ್ತಾನೆಯೋ, ಅವನು ಎಂದರ್ಥ.

ವಿಘ್ನೇಶ

ವಿಘ್ನ ಈಶ ವಿಘ್ನೇಶ. ವಿಘ್ನಗಳನ್ನು ನಿಯಂತ್ರಿಸಿ ನಾಶ ಮಾಡುವವನೇ ವಿಘ್ನೇಶ. ಈಶ ಶಬ್ದವು ಈ ಶ ಹೀಗೆ ರೂಪುಗೊಂಡಿದೆ. ಈ - ಈಕ್ಷತೇ ಎಂದರೇ ನೋಡುವುದು ಮತ್ತು ಶ-ಶಮಯತೇ ಎಂದರೆ ಶಾಂತಗೊಳಿಸುವುದು. ಆದ್ದರಿಂದ ಈಶ ಎಂದರೆ ವಿಘ್ನಕಾರಕವಾದ ರಜ ತಮೋ ಮುಂತಾದ ಲಹರಿಗಳ ಬಗ್ಗೆ ಗಮನವಿರಿಸಿ ನಾಶ ಮಾಡುವವನು ಎಂದು ಅರ್ಥವಾಗುತ್ತದೆ.

ಧೂಮ್ರವರ್ಣಂ

ಧೂಮ್ರ ಎಂದರೆ ಹೊಗೆ. ಘನರೂಪದಲ್ಲಿರುವ ಸಗುಣ ಮತ್ತು ನಿರ್ಗುಣ ರೂಪಗಳ ನಡುವಿನ ಮಧ್ಯದ ಅವಸ್ಥೆಯೆಂದರೆ ಹೊಗೆ. ಯಾರು ಇಂತಹ ಧೂಮ್ರವರ್ಣದವನಾಗಿದ್ದಾನೆಯೋ ಅವನೇ ಧೂಮ್ರವರ್ಣ. 'ಹೊಗೆ ಇದ್ದಲ್ಲಿ ಅಗ್ನಿಯೂ ಇದೆ' ಎಂಬ ನಿಯಮದಂತೆ ಗಣಪತಿಯಲ್ಲಿ ಅಗ್ನಿತತ್ವವೂ ಇದ್ದೇ ಇರುತ್ತದೆ.

ಭಾಲಚಂದ್ರ

ಭಾಲ ಎಂದರೆ ಹಣೆ. ಚಂದ್ರಮನನ್ನು ಯಾರು ಭಾಲದಲ್ಲಿ ಧರಿಸಿದ್ದಾನೆಯೋ ಅವನೇ ಬಾಲಚಂದ್ರ. ಮೂಲತಃ ಶಿವನ ಹೆಸರಾದ ಇದು ಅವರ ಮಗನಾದ್ದರಿಂದ ಗಣಪತಿಗೂ ಬಂದಿತು.

ವಿನಾಯಕ

'ವಿನಾಯಕ' ಶಬ್ದವು 'ವಿಶೇಷರೂಪೇಣ ನಾಯಕಃ' ಹೀಗೆ ನಿಷ್ಪನ್ನವಾಗಿದೆ. ನಾಯಕನ ಎಲ್ಲಾ ವೈಶಿಷ್ಟ್ಯಗಳೂ ಇರುವವನು ಎನ್ನುವುದು ಇದರ ಅರ್ಥ.

ಗಣಪತಿ

ಗಣ ಪತಿ ಗಣಪತಿ. ಪತಿ ಎಂದರೆ ಪಾಲನೆ ಮಾಡುವವನು. ಗಣ ಎನ್ನುವುದು, ಪಾಣಿನಿ ಮಹರ್ಷಿಗಳ ಪ್ರಕಾರ ಅಷ್ಟವಸುಗಳ ಸಮೂಹ. 'ವಸು' ಎಂದರೆ ದಿಕ್ಕುಗಳು, ದಿಕ್ಪಾಲರು ಎಂಬ ಅರ್ಥವೂ ಇದೆ. ಗಣಪತಿಯು ದಿಕ್ಕುಗಳ ಪತಿ, ಸ್ವಾಮಿಯಾಗಿದ್ದಾನೆ. ಅವನ ಅನುಮತಿಯಿಲ್ಲದೆ ಇತರ ದೇವತೆಗಳು ಯಾವ ದಿಕ್ಕಿನಿಂದಲೂ ಬರಲಾರರು. ಒಮ್ಮೆ ಗಣಪತಿಯು ದಿಕ್ಕುಗಳನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿದರೆ ನಮ್ಮ ಆರಾಧ್ಯದೇವತೆಯು ಅಲ್ಲಿ ಬರಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಯಾವುದೇ ಮಂಗಳಕಾರ್ಯವನ್ನು ಅಥವಾ ದೇವತಾಪೂಜೆಯನ್ನು ಮಾಡುವಾಗ ಮೊದಲು ಗಣಪತಿ ಪೂಜೆ ಮಾಡುವುದು.

ಗಜಾನನ

ಆನೆಯ ಮುಖವುಳ್ಳವನು ಎನ್ನುವುದು ಸಾಮಾನ್ಯ ಅರ್ಥ. 'ಸಮಾಧಿನಾ ಯೋಗಿನೋ ಯತ್ರ ಗಚ್ಛಂತಿ ಇತಿ ಗಃ' (ಸಮಾಧಿಯಿಂದ ಯೋಗಿಗಳು ಎಲ್ಲಿಗೆ ತಲುಪುವರೋ ಅದೇ ಗಕಾರವು). ಮುದ್ಗಲ ಪುರಾಣದ ಪ್ರಕಾರ 'ಗ' ಎಲ್ಲಿ ಎಲ್ಲವೂ ಲಯವಾಗುತ್ತದೋ ಆ ತತ್ವ ಮತ್ತು 'ಜ' ಯಾವುದರಿಂದ ಜಗತ್ತು ಉಂಟಾಗುತ್ತದೆಯೋ ಅಂತಹ ತತ್ವ. ಆದ್ದರಿಂದ 'ಗಜ' ಎಂದರೆ ಬ್ರಹ್ಮ. ಯಾರ ತಲೆಯು ನಿರುಪಾಧಿಕ ಬ್ರಹ್ಮಪರವಾಗಿಯೂ, ಯಾರ ದೇಹವು ಸಂಪೂರ್ಣ ವಿಶ್ವಮಯವೂ ಆಗಿದೆಯೋ ಅವನೇ ಗಜಾನನ.

ವಿಶ್ವರೂಪ ಗಣಪತಿ

ಸಾಮಾನ್ಯವಾಗಿ ಶ್ರೀಗಣಪತಿಯು ಚತುರ್ಭುಜನಾಗಿರುತ್ತಾನೆ. ಆತನ ಕೆಳಗಿನ ಹಸ್ತಗಳಲ್ಲಿ ಅಭಯಮುದ್ರೆ ಮತ್ತು ಮೋದಕವನ್ನು ಗ್ರಹಿಸಿರುತ್ತಾನೆ ಮತ್ತು ಮೇಲಿನ ಎರಡು ಹಸ್ತಗಳಲ್ಲಿ ಪಾಶ ಮತ್ತು ಅಂಕುಶಗಳನ್ನು ಧರಿಸಿರುತ್ತಾನೆ. ಅಭಯಮುದ್ರೆ ಎಂದರೆ 'ಶರಣಾಗತರಿಗೆ ಸಂಪೂರ್ಣ ರಕ್ಷಣೆ ನೀಡಿದ್ದೇನೆ' ಎಂದು ತೋರಿಸುವ ಒಂದು ಕ್ರಮ. ಇನ್ನು ಮೋದಕವೆಂದರೆ, 'ಮೋದ' ಎಂದರೆ ಆನಂದ ಮತ್ತು 'ಕ' ಎಂದರೆ ಚಿಕ್ಕಭಾಗ. ಮೋದಕವೆಂದರೆ ಆನಂದದ ಒಂದು ಚಿಕ್ಕಭಾಗ. ಮೋದಕದ ಆಕಾರವು ತೆಂಗಿನಕಾಯಿಯಂತಿದೆ. ಅಂದರೆ 'ಖ' ಎನ್ನುವ ಬ್ರಹ್ಮರಂಧ್ರವಿರುವ ಟೊಳ್ಳಿನಂತಿರುತ್ತದೆ. ಕುಂಡಲಿನಿಯು 'ಖ' ವರೆಗೂ ತಲುಪಿದಾಗ ಆನಂದದ ಅನುಭೂತಿ ಬರುತ್ತದೆ. ಶ್ರೀಗಣೇಶನ ಕೈಯಲ್ಲಿರುವ ಮೋದಕವೆಂದರೆ ಆನಂದವನ್ನು ಪ್ರಸಾದಿಸುವ ಶಕ್ತಿ. ಇನ್ನೊಂದು ಅರ್ಥದಲ್ಲಿ ಮೋದಕವು ಜ್ಞಾನದ ಪ್ರತೀಕವಾಗಿದೆ.

ಪಾಶವು, ತಾಮಸ, ಅಜ್ಞಾನ, ಮಾಯೆ ಇತ್ಯಾದಿಗಳ ಸಂಕೇತ. ಇದು ಸಾಂಸಾರಿಕ ಬಂಧನದ ಪ್ರತೀಕ. ಶ್ರೀಗಣೇಶನು ಕೈಯಲ್ಲಿ ಪಾಶವನ್ನು ಹಿಡಿದು ಇವುಗಳ ಮೇಲೆ ತನ್ನ ನಿಯಂತ್ರಣವನ್ನು ತೋರುತ್ತಿದ್ದಾನೆ.

'ಅಂಕುಶವು ಪ್ರವೃತ್ತಿರೂಪವಾದ ರಜೋಗುಣವನ್ನು ತೋರುವುದು. ಇದು ಆನಂದ ಮತ್ತು ಜ್ಞಾನಾರ್ಜನೆಗಳಿಗೆ ವಿಘ್ನಮಾಡುವ ಶಕ್ತಿಗಳನ್ನು ನಾಶ ಮಾಡುವುದು. ಅಪಾರವು, ಅನಂತವು ಆದ ಆನಂದಾಮೃತಸಾಗರದ ಕೆಲವು ಬಿಂದುಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ಅದರಿಂದಲೇ ಆ ದೇವದೇವನಿಗೆ ಅರ್ಘ್ಯವನ್ನು ನೀಡುವ ರೀತಿಯಲ್ಲಿ ಈ ಪುಟ್ಟ ಲೇಖನದಲ್ಲಿ ಆ ಮಹದ್ವಸ್ತುವಿನ ವಿಶ್ಲೇಷಣೆಯು ನಡೆದಿದೆ.

ನಮೋನಮಃ ಸುರವರ

ಪೂಜಿತಾಂಘ್ರಯೇ

ನಮೋನಮೋ ನಿರುಪಮ

ಮಂಗಲಾತ್ಮನೆ

ನಮೋನಮೋ ವಿಪುಲ ಪದೈಕಸಿದ್ಧಯೇ

ನಮೋನಮಃ

ಕರಿಕಲಭಾನನಾಯ ತೇ ॥

ದೇವತಾ ಶ್ರೇಷ್ಠರಿಂದ ಪೂಜಿತವಾದ ಪಾದಕಮಲಗಳನ್ನು ಉಳ್ಳವನಿಗೆ ನಮಸ್ಕಾರಗಳು. ಅಸದೃಶವಾದ ಮಂಗಲ ಸ್ವರೂಪನಿಗೆ ನಮಸ್ಕಾರಗಳು. ಅತಿಶಯವಾದ ಅದ್ವಿತೀಯ ಸಿದ್ಧಿಸ್ವರೂಪನಿಗೆ (ಮೋಕ್ಷ ಸ್ವರೂಪನಿಗೆ) ನಮಸ್ಕಾರಗಳು. ಪುಟ್ಟ ಆನೆಯ ಮುಖದಂತೆ ಮುದ್ದಾದ ಮುಖದವನಿಗೆ ನಮಸ್ಕಾರಗಳು.

'ಸರ್ವಂ ಶ್ರೀಗಣೇಶಪಾದಾರವಿಂದಾರ್ಪಣಮಸ್ತು'

-ಹರ್ಷ ಕಣೇಕಲ್, ಬೆಂಗಳೂರು

Tuesday 28 March 2017

ಒಂದು ವರುಷ........

ಒಂದು ವರುಷದ ಪಯಣ......

ಆತ್ಮೀಯರೇ, ನಾನೂ ಒಂದು ಬ್ಲಾಗ್ ನ ತೆರೆಯ ಬೇಕು,ಅದರಲ್ಲಿ ಮನಸ್ಸಿಗೆ ಹೊಳೆಯುವ ವಿಚಾರಗಳನ್ನು ಬರೆಯ ಬೇಕು ಎಂದು ಬಹಳಷ್ಟು ಆಸೆಗಳೊಂದಿಗೆ ಹರ್ಷ ನ ಬೆನ್ನು ಹತ್ತಿ ಅಂತೂ ಬ್ಲಾಗಿಗ ನಾದೆ....ಬ್ಲಾಗನ್ನು ತೆರೆದು ಒಂದು ವರ್ಷವೂ ಆಯಿತು....(ಯುಗಾದಿ-2016 ಯ ದಿನ)... ಆದರೆ ಬ್ಲಾಗ್ ನ ತೆರೆಯುವ ಮುಂಚೆ ಇದ್ದ ಆಸೆಗಳು ಬ್ಲಾಗ್ ತೆರೆದ ನಂತರ ಏನಾಯಿತೋ ಗೊತ್ತಾಗಲೇ ಇಲ್ಲ....ಆದರೂ ಅಲ್ಲಿ ಇಲ್ಲಿ ಓದಿದ ಕೆಲವು ವಿಚಾರಗಳನ್ನು ಬ್ಲಾಗಿಸಿದೆ.....

   ಈ ಒಂದು ವರ್ಷದ ಅವಧಿಯಲ್ಲಿ ತಿಳಿದು ಕೊಂಡ ಮುಖ್ಯ ವಾದ ವಿಷಯ ಏನೆಂದರೆ, ಮನಸ್ಸಿಗೆ ಬಂದಂತ ಎಲ್ಲಾ ವಿಚಾರಗಳನ್ನು ನನ್ನಂತ ಸಾಮಾನ್ಯನಿಗೆ ಅಕ್ಷರ ರೂಪ ಕೊಡಲು ಖಂಡಿತ ಸಾಧ್ಯವಿಲ್ಲ ಎಂದು....ಎದೆಗೆ ಬಿದ್ದ ಅಕ್ಷರ ಹಾಳೆಯ ಮೇಲೆ ಬೀಳುವುದು ಎಂದರೆ ತಮಾಷೆಯ ಮಾತಲ್ಲ .....
    ಬಹಳಷ್ಟು ವರುಷಗಳಿಂದ (??) ಏನನ್ನಾದರೂ ಬರೆಯಲೇ ಬೇಕು ಎಂಬ ಆಸೆ....ಅದರೆ ಏನು ಬರೆಯ ಬೇಕು ಅನ್ನೋದೆ ಗೊತ್ತಾಗದೆ ಸುಮ್ಮನೆ ಆಗುವುದು ಒಳ್ಳೆಯದು ಅನಿಸುತ್ತೆ ....
   ಒಂದೊಂದು ಸಲ ಅನ್ನಿಸುತ್ತೆ,  ಬರೆಯೋ ಆಸೆ ಬಿಟ್ಟು ಮಾಡೊ ಗಣಿತ ಪಾಠನ ಚೆನ್ನಾಗಿ ಮಾಡೊ ಪ್ರಯತ್ನ ಪಡೋಣ ಅಂತ,  ಯಾಕಂದ್ರೆ ಗಣಿತ ಅರ್ಥ ಮಾಡಿ ಕೊಂಡು, ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಿದರೆ ಮಹಾ ಕಾದಂಬರಿ ಬರೆದಂತೆ ಅಂತ ....
    ಆದರೂ ಬಿಡೋಲ್ಲ....ಆಗಾಗ ನಿಮಗೆ whattsapp ಲಿ message ಮಾಡ್ತಾ ಇರ್ತೀನಿ.........pls visit my blog ....ಅಂತ ......

ನಿಮ್ಮ ಸಹಕಾರಕ್ಕೆ ಧನ್ಯವಾದಗಳು......☺
    

Saturday 11 March 2017

ಹೋಳಿ......


ಹೋಳಿ ಹಬ್ಬ


ಹೋಳಿ ಹಬ್ಬ
ಮಾಘ -ಫಾಲ್ಗುಣ ಮಾಸಗಳ ಶಶಿರ ಋತು ಮುಗಿದು ಚೈತ್ರ ಮಾಸ ಆರಂಭವಾಗುವ ಸಂಧಿ ಕಾಲದಲ್ಲಿ ಜನಪದವು ಸಂಭ್ರಮದಿಂದ ಆಚರಿಸುವ ಹಬ್ಬವೇ ಹೋಳಿ ಹುಣ್ಣಿಮೆ. ಇದನ್ನು ಕಾಮನ ಹಬ್ಬ, ಕಾಮದಹನದ ಹಬ್ಬ ಅಥವಾ ಕಾಮನ ಹುಣ್ಣಿಮೆ ಎಂದೂ ಆಚರಿಸುತ್ತಾರೆ. ಭಾರತದಲ್ಲಿ ಹಬ್ಬಗಳಿಗೆ ಬರವೇನಿಲ್ಲ ಆದರೆ ಪ್ರತಿ ಹಬ್ಬಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ.
ಹಬ್ಬಗಳ ಪ್ರಾಮುಖ್ಯತೆಯನ್ನು ಪೌರಾಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ತಾತ್ವಿಕ ದೃಷ್ಟಿಕೋನಗಳಿಂದ ನೋಡಬಹುದು. ಹೋಳೀ ಹಬ್ಬವನ್ನು ಈ ಆಯಾಮಗಳಿಂದ ನೋಡಿದಾಗ ನಮಗೆ ಕೆಲವು ಕಥೆಗಳು ತಿಳಿದು ಬರುತ್ತವೆ. ’ ಹೋಳಿ ’ ಎಂದರೆ ಸಂಸ್ಕೃತದಲ್ಲಿ ’ಸುಡು’ ಎಂದರ್ಥ. ಹಾಗಾದರೆ ಏನನ್ನು ಸುಡುವುದು?
ಹಿರಣ್ಯಕಶ್ಯಪುವಿನ ಮಗ ಪ್ರಹಲ್ಲಾದನ ಕಥೆ ಎಲ್ಲರಿಗೂ ಗೊತ್ತಿದ್ದೆ. ನಾನು ಎಂಬ ಅಹಂಕಾರದಲ್ಲಿ ಮುಳುಗಿ, ಹರಿ ದ್ವೇಷಿಯಾಗಿ ಸರ್ವ ಶಕ್ತ ತಾನೇ ಆದ್ದರಿಂದ ಎಲ್ಲರೂ ತನ್ನನ್ನೇ ಪೂಜಿಸಬೇಕೆಂದು ಆಗ್ರಹಮಾಡಿದ್ದಲ್ಲದೆ ಮಾಡದವರನ್ನು ಶಿಕ್ಷೆಗೆ ಒಳಪಡಿಸುತ್ತಿದ್ದ. ಅವನ ಮಗ ಮಹಾ ಹರಿ ಭಕ್ತ. ಮಗನೆಂಬ ಮಮಕಾರವನ್ನು ತೊರೆದು ಅವನನ್ನು ಕೊಲ್ಲಿಸಲು ನಾನಾ ಪ್ರಯತ್ನಗಳನ್ನು ಮಾಡಿದ. ಅವುಗಳಲ್ಲಿ ಒಂದು ಅವನನ್ನು ಸುಡುವುದು! ಯಾವ ಶಕ್ತಿಯೂ ಅವನ ಸಹಾಯಕ್ಕೆ ಬರಬಾರದೆಂದು ತನ್ನ ತಂಗಿ ಹೋಳಿಕಾಳನ್ನೇ ಜೊತೆಮಾಡಿ ಪ್ರಹಲ್ಲಾದನನ್ನು ಬೆಂಕಿಯಲ್ಲಿ ಕೂಡಿಸುತ್ತಾನೆ. ಹೋಲಿಕಾ ಬಳಿ ಬೆಂಕಿ ತಾಕದಂತಿರುವ ಮೇಲುವಸ್ತ್ರ ಇರುತ್ತದೆ. ಆಕೆ ಅದನ್ನು ಹೊದೆದು ಪ್ರಹಲ್ಲಾದನನ್ನು ಹಿಡಿದು ಕೂಡಿಸಿಕೊಳ್ಳುತ್ತಾಳೆ. ಆದರೆ ದೈವ ನಿಯಮ ಬೇರೆಯೇ ಇರುತ್ತದೆ. ಆ ಮೇಲುವಸ್ತ್ರ ಗಾಳಿಗೆ ಹಾರಿ ಪ್ರಹಲ್ಲದನ ಮೇಲೆ ಬಿದ್ದು ಅವನನ್ನು ರಕ್ಷಿಸುತ್ತದೆ ಹಾಗೂ ಹೋಲಿಕಾ ಉರಿದು ಬೂದಿಯಾಗುತ್ತಾಳೆ.
ಮಾನವ ಶಕ್ತಿಗೆ ಮೀರಿದ ಬೇರೊಂದು ಪರಮಶಕ್ತಿ ಇರುವುದರ ಸಂಕೇತ ಈ ಕಥೆ. ದುಷ್ಟ ಕಾರ್ಯದಲ್ಲಿ ಭಾಗಿಯಾದಾಗ,ನಾವು ನಂಬಿದ ರಕ್ಷಣೆಗಳು ರಕ್ಷಿಸುವುದಿಲ್ಲ ಎಂಬುದು ಇಲ್ಲಿನ ಮತ್ತೊಂದು ಸಂದೇಶ. ಧರ್ಮಕ್ಕೆ ಜಯ ಎಂಬ ನೀತಿಯ ಬೋಧನೆ ಸಮಾಜಕ್ಕೂ ,ವ್ಯಕ್ತಿಗಳಿಗೂ ಈ ಕಥೆಯಲ್ಲಿ ಅಡಕವಾಗಿದೆ. ಈ ಕಾರಣಕ್ಕೆ ಈ ಹಬ್ಬವನ್ನು ’ಹೋಳಿ’ ಅಥವಾ ’ಹೋಲಿ’ ಎಂದು ಕರೆಯುತ್ತಾರೆ. ಬಾಲ್ಯದಲ್ಲಿ ಧರ್ಮವ ಕುರಿತು ಅಚಲ ನಂಬಿಕೆ ವಿಶ್ವಾಸಗಳು ಮಕ್ಕಳಲ್ಲಿ ಬೆಳೆಯಲೆಂಬುದು ಈ ಕಥೆಯ ಆಶಯ.
ಎರಡೆನೆಯ ಕಥೆ ಮನ್ಮಥ ಅಥವಾ ಕಾಮದಹನಕ್ಕೆ ಸಂಬಂಧಿಸಿದ್ದು. ಕೈಲಾಸವಾಸಿಯಾದ ಶಿವನು ನಿರಾಭರಣ.ಅವನನ್ನು ಮೆಚ್ಚಿ ದಾಕ್ಷಾಯಿಣಿ ಅಥವಾ ಸತಿದೇವಿ ಮದುವೆಯಾಗುತ್ತಾಳೆ. ಅವಳ ತಂದೆ ದಕ್ಷಬ್ರಹ್ಮನಿಗೆ ಈ ಮದುವೆ ಇಷ್ಟವಿರುವುದಿಲ್ಲ. ಶಿವ ಬೈರಾಗಿ, ಬಡವ ಎಂದವನ ಮೂದಲಿಕೆ. ಒಮ್ಮೆ ಅವನು ವಿಶ್ವ ಯಜ್ಞವನ್ನು ಮಾಡಿದಾಗ ಅಲ್ಲಿಗೆ ಹೋದ ತನ್ನ ಮಗಳನ್ನೇ ಮೂದಲಿಸಿದ. ಅಪಮಾನ ತಡೆಯದೆ, ಪುನಃ ಮರಳಿ ಕೈಲಾಸಕೂ ಹೋಗಲಾಗದೆ ಸತಿ ದೇವಿ ಆ ಯಜ್ಞಕುಂಡದಲ್ಲಿ ಬಿದ್ದು ತನ್ನ ಪ್ರಾಣ ಕಳೆದುಕೊಳ್ಳುತ್ತಾಳೆ. ವೀರಭದ್ರನನ್ನು ಕಳಿಸಿ ದಕ್ಷನಿಗೆ ಶಾಸ್ತಿ ಮಾಡಿ ಪರಮಶಿವನು ತಪದಲ್ಲಿ ನಿರತನಾಗುತ್ತಾನೆ. ಇತ್ತ ತಾರಕಾಸುರನ ಕಾಟ ತಾಳಲಾರದೆ ದೇವರುಗಳು ತೊಳಲಾಡುತ್ತ ಶಿವನನ್ನು ಒಲಿಸಿ ಅವನು ಪಾರ್ವತಿಯನ್ನು ಮದುವೆಯಾಗಿ ಮಗನನ್ನು ಪಡೆದು ತಾರಕ ಸಂಹಾರ ಮಾಡಿಸಬೇಕೆಂದು ಬೇಡಿಕೊಳ್ಳುತ್ತಾರೆ. ಶಿವನು ಜಗ್ಗುವುದಿಲ್ಲ. ಆಗ ಕಾಮದೇವನನ್ನು ಕಳಿಸುತ್ತಾರೆ. ಗಿಣಿಯ ಮೇಲೆ ಕುಳಿತು,ಕಬ್ಬಿನ ಬಿಲ್ಲು ಹಿಡಿದು,ಮಲ್ಲಿಗೆ, ಸಂಪಿಗೆ,ಮುಂತಾದ ಹೂಬಾಣಗಳಿಂದ ಶಿವನ ತಪಸ್ಸನ್ನು ಕಷ್ಟಪಟ್ಟು ಭಂಗ ಮಾಡುತ್ತಾನೆ. ಆಗ ಅವನ ಕ್ರೋಧಾಗ್ನಿಗೆ ತುತ್ತಾಗಿ ಬೂದಿಯಾಗುತ್ತಾನೆ. ಮನ್ಮಥನ ಹೆಂಡತಿ ರತಿಯು ರೋದಿಸಿ ಬೇಡಿಕೊಳ್ಳಲು, ಅವನನ್ನು ಬದುಕಿಸಿ ಕೊಡುತ್ತಾನೆ ಆದರೆ ಅನಂಗನಾಗಿ, ಯಾರ ಕಣ್ಣಿಗೂ ಕಾಣದಂತೆ ಉಳಿಸುತ್ತಾನೆ. ಹಾಗಾಗಿ ಇಂದು ಕಾಮ ದೇವ ಕೇವಲ ಮಾನಸ ಪ್ರತಿಮೆ. ಪ್ರತಿಯೊಬ್ಬರ ಮನದಲ್ಲೂ ಆಕಾರ ಅವರವರ ಮನೋಭಿರುಚಿಗೆ ಅನುವಾಗಿ ಇರುತ್ತಾನೆ.
ಶಿವನ ತಪಸ್ಸು ಜೀವನಕ್ಕೆ ಬೇಕಾದ ಏಕಾಗ್ರತೆ, ಗುರಿ ಸಾಧನೆಗೆ ಅವಶ್ಯಕವಾದ ಚಿತ್ತ ಸಂಕಲ್ಪ ಪ್ರತಿನಿಧಿಸುತ್ತದೆ. ಕಾಮದೇವ ನಮ್ಮ ಸುತ್ತಲಿನ , ನಮ್ಮ ಉದ್ದೇಶದಿಂದ ದೂರ ಸೆಳೆಯಬಹುದಾದ ವಿದ್ಯಮಾನಗಳನ್ನು ಪ್ರತಿನಿಧಿಸುತ್ತದೆ. ಯೌವನದಲ್ಲಿ ನಮಗಾಗುವ ಚಿತ್ತ ಚಂಚಲೆನೆಗೂ, ಅದನ್ನು ಪ್ರತಿರೋಧಿಸಬೇಕಾದ ಮನೋನಿಗ್ರಹಕ್ಕೂ ಈ ಕಥೆ ಉದಾಹರಣೆ.
ಈ ವಸಂತ ಋತುವಿನ ಅಗಮನದೊಂದಿಗೆ ಜೀವಸಂಕುಲ ನಳನಳಿಸುತ್ತಿರುವಾಗ ಚಿತ್ತ ಚಂಚಲವಾಗುವುದು ಸಹಜ. ಅದನ್ನು ’ಸುಡು’ ಎಂಬುದೇ ಈ ಆಚರಣೆಯ ಹಿಂದಿನ ಸಂದೇಶ.
ಚಳಿಗಾಲ ಕಳೆದು ವಸಂತಋತು ಕಾಲಿಡುವಾಗ ಹೊಸಚಿಗುರು ಮೂಡಿ, ಹೂ ಅರಳಿ ಸಕಲ ಜೀವರಾಶಿ ಬಣ್ಣಗಳಿಂದ ಕೂಡಿ ನಲಿಯುವಾಗ ಮಾನವ ಮಾತ್ರ ಹಾಗೆ ಇರಬೇಕೆ. ಈ ಸಂತೋಷದಲ್ಲಿ ಭಾಗಿಗಳಾಗಲು ನಾವೂ ಕೂಡ ರಂಗಿನಾಟದಲ್ಲಿ ತೊಡಗುವುದು. ನಮ್ಮ ಜೀವನವನ್ನು ನಿಯಂತ್ರಿಸುತ್ತವೆ ಎಂದು ನಂಬಲಾದ ಗ್ರಹಗಳಿಗೂ ತಮ್ಮ ತಮ್ಮ ಬಣ್ಣಗಳಿದ್ದು, ಈ ಬಣ್ಣಗಳನ್ನು ನಮ್ಮ ಮೇಲೆ ಆರೋಪಿಸಿಕೊಂಡು ಅವುಗಳನ್ನು ಸಂತೃಪ್ತಿಗೊಳಿಸುವುದು ಈ ಹಬ್ಬದ ಇನ್ನೊಂದು ಆಶಯ. ಈ ಸಂದರ್ಭದಲ್ಲಿ ಎಲ್ಲರೂ ತಂತಮ್ಮ ಭೇದ ಭಾವಗಳನ್ನು ಮರೆತು ಒಂದಾಗಿ ಆನಂದಿಸುವುದು ಸಾಮಾಜಿಕ ಆಶಯ. ಲೋಕೋ ವಿಭಿನ್ನ ರುಚಿಃ. ಮನೋಭಾವಗಳಲ್ಲಿ ಭೇದ ಸಹಜ; ಇದು ಜೀವನದ ಅನಿವಾರ್ಯ ಸತ್ಯ. ವಿವಿಧ ಬಣ್ಣಗಳು ಈ ಭೇದವನ್ನೇ ಪ್ರತಿನಿಧಿಸುವುದು. ಎಲ್ಲ ಬಣ್ಣಗಳನ್ನು ಎಲ್ಲರೂ ಎರಚುವುದು ಸಹಿಷ್ಣತೆಯ ಸಂಕೇತ. ಎಲ್ಲ ಬಣ್ಣ ಸೇರಿ ಬಿಳಿಯ ಬಣ್ಣವಾಗುವಂತೆ ಎಲ್ಲ ಭೇದ ಮರೆತು ಶುದ್ಧ ಮನಸ್ಸಿನಿಂದ ಹಬ್ಬವನ್ನು ಆಚರಿಸಿ
ಸಂಭ್ರಮಿಸುವುದು ಆ ಮೂಲಕ ಸಾಮಾಜಿಕ ಒಗ್ಗಟ್ಟಿಗೆ ನಾಂದಿ ಹಾಡುವುದು ಈ ಹಬ್ಬದ ಉನ್ನತ ಆಶಯಗಳಲ್ಲಿ ಒಂದು

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು